ತಹಶೀಲ್ದಾರ ಕಚೇರಿಯಲ್ಲಿ ಸಿಬ್ಬಂದಿ ಕೊರತೆ, ಸೋರುತ್ತಿರುವ ಕಟ್ಟಡ.
ಸಂದೇಶ ದೇಸಾಯಿ
ವಿಶೇಷ ವರದಿ ಜೋಯಿಡಾ.
ಜೋಯಿಡಾ – ತಾಲೂಕಿನಲ್ಲಿ ಕಳೆದ ಒಂದುವರೆ ತಿಂಗಳಿಂದ ತಹಶೀಲ್ದಾರ ಇಲ್ಲದೆ ತಾಲೂಕಿನ ಜನರು ಸಮಸ್ಯೆ ಎದುರಿಸುವಂತಾಗಿದೆ. ತಾಲೂಕಾ ದಂಡಾಧಿಕಾರಿ ಇಲ್ಲದೆ , ಇಲ್ಲಿನ ಸಿಬ್ಬಂದಿಗಳು ಸಾರಥಿ ಇಲ್ಲದ ರಥದಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಹೌದು ಜೋಯಿಡಾ ತಾಲೂಕು ಮೊದಲೇ ಹಿಂದುಳಿದ ತಾಲೂಕಾಗಿದ್ದು , ಇಲ್ಲಿ ತಹಶೀಲ್ದಾರರ ಇಲ್ಲದ ಕಾರಣ ತಾಲೂಕಿನ ಎಲ್ಲಾ ಕೆಲಸಗಳು ಹಿಂದೆ ಬಿದ್ದಿವೆ. ದಾಂಡೇಲಿ ಪ್ರಭಾರಿ ತಹಶಿಲ್ದಾರರ ಕೆಲಸ ನಿರ್ವಹಿಸುತ್ತಿದ್ದು ,ಇವರು ದಿನವೂ ಹಾಜರಾಗಲು ಸಾಧ್ಯವಾಗುವುದಿಲ್ಲ. ಹಿಂದುಳಿದ ತಾಲೂಕಿನಲ್ಲಿ ತಹಶೀಲ್ದಾರ ಕೊರತೆ ಎದ್ದು ಕಾಣುತ್ತಿದ್ದು, ಜಿಲ್ಲಾಡಳಿತ, ಜನಪ್ರತಿನಿಧಿಗಳು ನೂತನ ತಹಶೀಲ್ದಾರರನ್ನು ಜೋಯಿಡಾಕ್ಕೆ ನೇಮಿಸಬೇಕಿದೆ.

ಜೋಯಿಡಾ ತಹಶೀಲ್ದಾರ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದ್ದು 16 ಗ್ರಾಮ ಲೆಕ್ಕಿಗರ ಹುದ್ದೆಯಲ್ಲಿ 8 ಜನ ಮಾತ್ರ ಸೇವೆ ಸಲ್ಲಿಸುತ್ತಿದ್ದು ಉಳಿದ ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ ಇರುವ ಕಾರಣ 8 ಜನ ಗ್ರಾಮ ಲೆಕ್ಕಿಗರೇ ತಾಲೂಕಿನ ಎಲ್ಲಾ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಉಪ ತಹಶೀಲ್ದಾರ ಹುದ್ದೆಯು ಖಾಲಿ ಇದೆ. ಇನ್ನೂ ಹಲವು ಪೋಸ್ಟ್ ಗಳು ತಹಶೀಲ್ದಾರ ಕಚೇರಿಯಲ್ಲಿ ಖಾಲಿ ಇದ್ದು ,ತಾಲೂಕಿನ ಎಲ್ಲಾ ಇಲಾಖೆ ಮತ್ತು ತಹಶೀಲ್ದಾರ ಕಚೇರಿಗೆ ಸಂಬಂಧಿಸಿದ ಕೆಲಸಗಳನ್ನು ಇದ್ದ ಕೆಲ ಅಧಿಕಾರಿಗಳೇ ಕಷ್ಟಪಟ್ಟು ಮಾಡುವಂತಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸರ್ಕಾರಕ್ಕೆ ತಿಳಿಸಬೇಕಿದೆ.

ಅದಲ್ಲದೇ ಜೋಯಿಡಾ ತಹಶೀಲ್ದಾರ ಕಚೇರಿಯು ಸಂಪೂರ್ಣವಾಗಿ ಮಳೆಗಾಲದಲ್ಲಿ ಸೋರುತ್ತಿದೆ. ಎಲ್ಲಿ ನೋಡಿದರಲ್ಲಿ ನೀರು ತುಂಬಿಕೊಂಡಿದೆ,. ಸೋರುವ ಕಟ್ಟಡದಿಂದಾಗಿ ಇಲ್ಲಿ ಲೆಕ್ಕಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳುವುದೇ ಕಷ್ಟವಾಗಿದೆ. ಅಲ್ಲದೇ ತಹಶೀಲ್ದಾರ ಕಚೇರಿಯ ಒಳ ಭಾಗದಲ್ಲಿಯೂ ಸೋರುವಲ್ಲಿ ಬಕೆಟಗಳನ್ನು ಇಡಲಾಗಿದೆ, ಕೆಲ ಕಡೆಗಳಂತು ಮಳೆಯ ನೀರು ಬಿದ್ದು ಗೋಡೆ ಕುಸಿಯುವ ಸ್ಥಿತಿಯಲ್ಲಿದೆ.ಹೊಸ ತಹಶೀಲ್ದಾರ ಕಟ್ಟಡ ಕೆಲಸ ಆಮೆ ಗತಿಯಲ್ಲಿ ಸಾಗುತ್ತಿದ್ದು ,ಈ ಕಟ್ಟಡವು ಸರಿಯಿಲ್ಲದ ಕಾರಣ ಸೋರುವ ಕಟ್ಟಡದಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
ತಹಶೀಲ್ದಾರ ಕಚೇರಿಯಲ್ಲಿಯೇ ಇರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿಯೂ ಹತ್ತು ಹುದ್ದೆಗಳಲ್ಲಿ ಕೇವಲ ಒಬ್ಬರೇ ಸಿಬ್ಬಂದಿ ಇದ್ದು ಇಲ್ಲಿಯೂ ಸಿಬ್ಬಂದಿಗಳಲ್ಲದೇ ಸಮಸ್ಯೆ ಉಂಟಾಗುತ್ತಿದೆ.

ಒಟ್ಟಾರೆಯಾಗಿ ತಹಶೀಲ್ದಾರ ಕಚೇರಿಯಲ್ಲಿ ಸಿಬ್ಬಂದಿ ಕೊರತೆ , ಹಾಳಾದ ಕಟ್ಟಡ, ಸ್ವಚ್ಚತೆ ಇಲ್ಲದೇ ಇರುವ ಕಾರಣ ಜನರಿಗೆ ಸಮಸ್ಯೆ ಉಂಟಾಗುತ್ತಿದೆ.

ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ ಇಲ್ಲದೇ ಇರುವ ಕಾರಣ ಜನರಿಗೆ ಸಮಸ್ಯೆ ಉಂಟಾಗುತ್ತಿದೆ. ರಾಜ್ಯದಲ್ಲಿಯೇ ಅತಿ ದೊಡ್ಡ ತಾಲೂಕುಗಳ ಪೈಕಿಯಲ್ಲಿ ಜೋಯಿಡಾ ಕೂಡಾ ಒಂದು. ದೊಡ್ಡ ತಾಲೂಕಾದ್ದರಿಂದ ಸಮಸ್ಯೆ ಸಾಕಷ್ಟಿದೆ. ಕೂಡಲೇ ಜೋಯಿಡಾ ತಹಶೀಲ್ದಾರ ಕಚೇರಿಯ ವ್ಯವಸ್ಥೆ ಸರಿಪಡಿಸಬೇಕಿದೆ.
ಹರೀಷ ಭಟ್ಟ – ಜೋಯಿಡಾ
