ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ

ಲಕ್ಷಾಂತರ ರೂ ಹಣ ಹಾಗೂ ಆಭರಣವನ್ನು ವಾಪಸ್ಸು ಕೊಡಿಸಿದ ಅಂಕೋಲಾ ಪೊಲೀಸರು

ವರದಿ : ರಾಘು ಕಾಕರಮಠ.

ಇದು ಅಂಕೋಲಾಕ್ಕೆ ಸೊಸೆಯಾಗಿ ಬಂದ ಕಿಲಾಡಿ ಮಹಿಳೆಯೊಬ್ಬಳ ಖತರ್ನಾಕ್ ಕಹಾನಿ.. ಈ ಮಹಿಳೆ ಒಂದಲ್ಲ ಎರಡಲ್ಲ ಬರೊಬ್ಬರಿ 24 ಪುರಷರೊಂದಿಗೆ ಮದುವೆ ಮಾಡಿಕೊಂಡು ಮಧುಚಂದ್ರದ ಘಳಿಗೆಯ ಮೊದಲೇ ಮಾಯವಾಗುತ್ತಿದ್ದ ಮಾಯಾಂಗನೆ. ಈ ಚಾಲಾಕಿ ಮಹಿಳೆಯನ್ನು ಅಂಕೋಲಾ ಪೊಲೀಸರು ತನ್ನ ಚಾಕಚಕ್ಯತೆಯ ಮೂಲಕ ಅವಳ ಮೋಸದ ಜಾಲವನ್ನು ಬಯಲು ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಈ ಮಹಿಳೆ ಮೂಲತ: ಬೆಳಗಾವಿಯವಳು. ಮದುವೆಯಾಗಿ ಮೋಸ ಮಾಡಿ, ವರನ ಮನೆಯವರು ಹಾಕಿದ ಆಭರಣದೊಂದಿಗೆ ಪರಾರಿಯಾಗುವದೇ ಇವಳ ಉದ್ಯೋಗ. ಹೀಗೆ ನಿರ್ದಿಷ್ಠ ವಯಸ್ಸು ಮೀರಿದ ಅವಿವಾಹಿತ ಪುರುಷರನ್ನು ಗುರುತಿಸಿ, ಅವರನ್ನು ತನ್ನ ಮೋಸದ ಜಾಲದ ಮೂಲಕ ಮದುವೆ ಎಂಬ ಖೆಡ್ಡಾಕ್ಕೆ ಕೆಡವಿ ಮೋಸ ಮಾಡುವದೇ ಈ ಬೃಹತ್ ಜಾಲದ ಟಾರ್ಗೆಟ್.

ಉತ್ತರಕನ್ನಡದಲ್ಲೆ 4 ಮದುವೆ :

ಈಗೀನ ಕಾಲದಲ್ಲಿ ಮದುವೆಗಾಗಿ ಸಭ್ಯರ್ಥ ಮಹಿಳೆಗೆ ಒಂದು ಗಂಡು ಸಿಗುವದೇ ದೊಡ್ಡ ಮಾತು. ಆದರೆ ಈ ಮಹಿಳೆ 2 ಡಜನ್ ಪುರುಷರಿಗೆ ಗಂಡನ ಪಟ್ಟ ನೀಡಿದ ಗಟ್ಟಿಗಿತ್ತಿ. ರಾಜ್ಯ-ಹೊರ ರಾಜ್ಯಗಳಲ್ಲಿ ಸೇರಿದಂತೆ 2 ಡಜನ್ ಮದುವೆಯಾದ ಈಕೆ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಶಿರಶಿ, ಕಾರವಾರ ಹಾಗೂ ಭಟ್ಕಳದಲ್ಲಿ ತಲಾ ಒದೊಂದು ಮದುವೆಯಾಗಿ ಕರಾಳ ದಾಖಲೆ ನಿರ್ಮಿಸಿ, ಉಕ ಜಿಲ್ಲೆಯಲ್ಲಿಯೆ ಯಾರ ಅರಿವಿಗೆ ಬರದಂತೆ 4 ಮದುವೆಯಾಗಿದ್ದಾಳೆ.

ಅಂಕೋಲಾ ಪೊಲೀಸರ ಚುರುಕಿನ ಕಾರ್ಯಾಚರಣೆ ;

ಅಂಕೋಲಾದಿ0ದ 8 ಕೀಮಿ ಅಂತರದಲ್ಲಿರುವ ಗ್ರಾಮವೊಂದರ ವರನಿಗೆ ಜೂನ್. 21 ರಂದು ಸರಳವಾಗಿ ಮದುವೆಯಾಗಿತ್ತು. ಜೂನ್ 23 ರಂದು ದೇವಸ್ಥಾನಕ್ಕೆ ಪೂಜೆ ನೀಡಲು ಅಂಕೋಲಾದ ವೆಂಕಟರಮಣ ದೇವಸ್ಥಾನಕ್ಕೆ ತೆರಳಿದ್ದರು. ದೇವರ ಪೂಜೆ ನಡೆಯುತ್ರಿರುವಾಗಲೆ, ಹಿಂಬದಿಯಲ್ಲಿ ನಿಂತಿದ್ದ ಪತ್ನಿ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿತ್ರು. ಎಲ್ಲಿ ಹುಡುಕಿದರೂ ಪತ್ತೆಯಾಗದಿದ್ದಾಗ ಅಂಕೋಲಾ ಪೊಲೀಸರ ಬಳಿ ಪತಿ ಮೊರೆ ಹೋಗಿ ದೂರು ದಾಖಲಿಸಿದ್ದರು.

ಅಂಕೋಲಾ ಠಾಣೆಯ ಸಿಪಿಐ ಸಂತೋಷ ಶೆಟ್ಟಿ ಪ್ರಕರಣವನ್ನು ಸೂಕ್ಷö್ಮವಾಗಿ ಅಧ್ಯಯನ ನಡೆಸಿದ್ದಾರೆ. ಪ್ರಕರಣವನ್ನು ಪತ್ತೆ ಮಾಡಲೆಬೇಕು ಎಂಬ ಉದ್ದೇಶದೊಂದಿಗೆ ಸಿಬ್ಬಂದಿಗಳಾದ ಶ್ರೀಕಾಂತ ಕಟಬರ, ರಮೇಶ ತುಂಗಳ ಹಾಗು ಒರ್ವ ಮಹಿಳಾ ಪೊಲೀಸ್ ಸಿಬ್ಬಂದಿಗಳು ಮಹಿಳೆ ಬಳಸುತ್ತಿದ್ದ ಮೋಬೈಲ ಲೋಕೆಶನ್ ಜಾಡನ್ನು ಹಿಡಿದು ಮಹಾರಾಷ್ಟçದ ಸಾತಾರಾಕ್ಕೆ ತೆರಳಿದ್ದಾರೆ. ಈ ಜಾಲದ ಪತ್ತೆಗೆ ಮುಂದಾದಾಗ ಅನೇಕ ಸವಾಲುಗಳನ್ನು ಈ ಪೊಲೀಸ್ ಸಿಬ್ಬಂದಿಗಳು ಎದುರಿಸಿದ್ದಾರೆ. ಈ ಪೊಲೀಸರು ನಮ್ಮನ್ನು ಬಿಡಲಾರರು ಎಂದು ಅರಿತ ಈ ಜಾಲದವರು ಬೆಳಗಾವಿ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಮೋಸ ಮಾಡಿ ದೋಚಿದ್ದ ಎಲ್ಲಾ ಬಂಗಾರವನ್ನು ಇಟ್ಟು ಪೊಲೀಸರ ಕೈಗೆ ಸಿಗದೇ ಜಾಗ ಬದಲಿಸಿದ್ದಾರೆ.

ಅಂತೂ ಎರಡು ಡಜನ್ ಮದುವೆಯಾದ ಮಹಿಳೆಯ ಅಸಲಿ ಮುಖವನ್ನು ಅಂಕೋಲಾ ಪೊಲೀಸರು ಬಿಚ್ಚಿಸಿದ್ದಾರೆ. ಮೋಸ ಹೋದ ಅನೇಕ ಪುರುಷರು ಮಾತ್ರ ಮರ್ಯಾದೆಗಾಗಿ ಅಂಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲ್ಲ.

ಬೇಲೆಕೇರಿಯ ಯುವ ಮೀನುಗಾರರ ಪ್ರಮುಖ ಸಚೀನ ಅಸ್ನೋಟಿಕರ ಈ ಬಗ್ಗೆ ಪ್ರತಿಕೃಯಿಸಿ ಮಾತನಾಡಿ ಹಣ ಹಾಗೂ ಆಭರಣದೊಂದಿಗೆ ನಾಪತ್ತೆಯಾಗಿದ್ದ ಮಹಿಳೆಯಿಂದ ಲಕ್ಷಾಂತರ ರೂಪಾಯಿಯ ಆಭರಣವನ್ನು ವಾಪಸ್ ಕೊಡಿಸುವಲ್ಲಿ ಅಂಕೋಲಾ ಪೊಲೀಸರು ತೋರಿದ ಕಾರ್ಯಕ್ಷಮತೆಗೆ ವಿಶೇಷವಾದ ಧನ್ಯವಾದಗಳು. ಈ ಪ್ರಕರಣದಿಂದಾಗಿ ಅವಿವಾಹಿತ ಪುರಷರು ಎಚ್ಚರಿಕೆಯಿಂದ ಇರುವಂತಾಗಿದೆ. ಸಿಪಿಐ ಸಂತೋಷ ಶೆಟ್ಟಿ, ಸಿಬ್ಬಂದಿಗಾಳದ ಶ್ರೀಕಾಂತ ಕಟಬರ, ರಮೇಶ ತುಂಗಳ ಅವರಿಗೆ ಜಿಲ್ಲೆಯ ನಾಗರಿಕರ ಪರಿವಾಗಿ ಅಭಿನಂದಿಸುತ್ತೇವೆ.