ವರದಿ: ದಿನಕರ ನಾಯ್ಕ ಅಲಗೇರಿ

ಅಂಕೋಲಾ : ತಾಲೂಕಿನ ಬಾಳೆಗುಳಿಯ ವಡ್ಡರ ಕಾಲೊನಿಯಲ್ಲಿ ಹಲವಾರು ವರ್ಷಗಳಿಂದ ವಾಸವಾಗಿದ್ದ ಭೋವಿ ವಡ್ಡರ ಸಮುದಾಯದ ಜನರು ಕಳೆದ ಮೂರು ವರ್ಷಗಳಿಂದ ತಮಗೆ ನೀಡುತ್ತಿದ್ದ ವಡ್ಡರ ಜಾತಿ ಪ್ರಮಾಣ ಪತ್ರ ಸ್ತಗಿತಗೊಂಡಿದ್ದು ಪುನಃ ನೀಡುವಂತೆ ಒತ್ತಾಯಿಸಿ ತಾ.ಪಂ. ಮಾಜಿ ಅಧ್ಯಕ್ಷ ವಿನೋದ ಗಾಂವಕರ ನೇತೃತ್ವದಲ್ಲಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.

ಅಂಕೋಲಾ ತಾಲೂಕಿನ ಬಾಳೆಗುಳಿ ವಡ್ಡರ ಕಾಲೋನಿಯ ಬೋವಿ ವಡ್ಡರ್ ಸಮುದಾಯದ ಕುಟುಂಬಗಳು ಅನೇಕ ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದು ಹಲವರು ಇಲ್ಲೇ ಹುಟ್ಟಿ ಬೆಳೆದು ತಮ್ಮ ಬದುಕನ್ನು ಕಟ್ಟಿಕೊಂಡಿದ್ದು ಆರ್ಥಿಕವಾಗಿ ತೀರಾ ಹಿಂದುಳಿದಿರುವವರಾಗಿದ್ದರೆ. ಬಹು ಮಟ್ಟಿಗೆ ಕೂಲಿ ಕೆಲಸ, ಕಟ್ಟಡ ಕೆಲಸ,ಕಲ್ಲು ಕೆಲಸ ಮಾಡಿ ಜೀವನ ನಡೆಸುತ್ತ ಇಲ್ಲಿಯೇ ನೆಲೆಸಿ ಆಧಾರ ಕಾರ್ಡ್ , ವೋಟರ ಕಾರ್ಡ, ಪಡಿತರ ಚೀಟಿ ಹೊಂದಿದವರೇ ಹೆಚ್ಚಿದ್ದರೂ ಅವರಿಗೆ ಈ ಹಿಂದಿನಂತೆ ಜಾತಿ ಪ್ರಮಾಣ ಪತ್ರ ಸಿಗದಿರುವುದರಿಂದ ಹಲವು ರೀತಿಯ ತೊಂದರೆ ಅನುಭವಿಸುವಂತಾಗಿದೆ.

ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಹೊಂದುವ ಮೂಲಕ ಶಿಕ್ಷಣ, ಉದ್ಯೋಗ ಮೊದಲಾದ ಸೌಲಭ್ಯಗಳನ್ನು ಪಡೆಯುತ್ತ ಬಂದಿರುವ ಭೋವಿ ವಡ್ಡರ್ ಸಮುದಾಯದವರಿಗೆ ಅಂಕೋಲಾ ತಹಶೀಲ್ಧಾರರ ಕಾರ್ಯಾಲಯದಲ್ಲಿ ಕಳೆದ ಮೂರು ವರ್ಷಗಳಿಂದ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಿದ್ದು ಯಾರದೋ ಪ್ರಕರಣವನ್ನು ಗುರಿಯಾಗಿಸಿ ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದು ಕಾರಣ ಹೇಳಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದ್ದು ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ ಮತ್ತಿತರ ಸೌಕರ್ಯಗಳನ್ನು ಪಡೆಯಲು ತೊಂದರೆ ಉಂಟಾಗಿದೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಬಡ ಜನರಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ್ ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ ಹಾಗೂ ಭೋವಿ ವಡ್ಡರ ಸಮುದಾಯದ ಬಾಳೆಗುಳಿ ನಿವಾಸಿಗಳು ಹಾಜರಿದ್ದರು.