ಅಂಕೋಲಾ: ಇಲ್ಲಿನ ಹುಣಿಸೆಮಡಗಿ ಕ್ರಾಸ್ ಎಂದು ಹೆಸರಾದ ಬೆಳಸೆ ಆಗೇರಕೇರಿ ಊರಿನ ಹೆದ್ದಾರಿಯಂಚಿನಲ್ಲಿ ಸ್ವಾತಂತ್ರ್ಯೋತ್ಸವದ ದಿನ ಅರಣ್ಯ ಇಲಾಖೆ, ಊರವರು, ಶಾಲೆ, ಅಂಗನವಾಡಿಯವರು ಸೇರಿ ಎರಡು ಹುಣಿಸೇಗಿಡಗಳನ್ನು ನೆಟ್ಟು ಹೆಸರು ಹಸಿರು ಎರಡನ್ನೂ ಉಳಿಸುವ ನಿಟ್ಟಿನಲ್ಲಿ ಸಂಕಲ್ಪವನ್ನು ಮಾಡಿದರು.

ಸುಮಾರು ಇನ್ನೂರು ವರ್ಷಗಳ ಹಿಂದಿನಿಂದಲೂ ಬೆಳಸೆ ಆಗೇರಕೇರಿಯ ಬಸ್‌ನಿಲ್ದಾಣವೆಂದರೆ ಅದು ಎರಡು ಬೃಹತ್ ಹುಣಿಸೇ ಮರಗಳು ಆಚೀಚೆ ನಿಂತು ನೆರಳು ಕೊಡುವ ಸ್ಥಳ..ಬಸ್ ಚಾಲಕರಿಗೆ,ನಿರ್ವಾಹಕರಿಗೆ,ಅಲ್ಲಿ ಹತ್ತಿಳಿವ ಜನರಿಗೆ ಅದು ಹುಣಸೇ ಮಡಗಿ ಕ್ರಾಸ್ ಎಂದು ಹೆಸರಾಗಿತ್ತು. ಈಗ ಐದಾರು ವರ್ಷಗಳ ಆಚೆ ಹೆದ್ದಾರಿ ಅಗಲೀಕರಣದ ಕಾರಣ ಎರಡೂ ಹುಣಿಸೆ ಮರಗಳು ಬುಡ ಸಮೇತ ಇಲ್ಲವಾಗಿದ್ದವು.. ಆದರೂ ಅದನ್ನು ಇಂದಿಗೂ ಹುಣಸೇ ಮಡಗಿ ಕ್ರಾಸ್ ಎಂದೇ ಜನ ಕರೆಯುತ್ತಿದ್ದರು.

ಈಗ ಹಳೆಯ ಹೆಸರನ್ನು ಮುಂದಿನವರಿಗೆ ಉಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಧರ್ಮಾ ಆಗೇರ ಹಾಗೂ ಜನಾರ್ಧನ್ ಆಗೇರ ಅವರು ತಂದ ಎರಡು ಹುಣಿಸೆ ಸಸಿಗಳನ್ನು ಇಲ್ಲಿನ ಶಾಲೆ ಹಾಗೂ ಅಂಗನವಾಡಿಯ ಮಕ್ಕಳು ಮತ್ತು ಊರವರು ಸೇರಿ ನೆಟ್ಟರು. ಈ ಸಂದರ್ಭದಲ್ಲಿ ಬೆಳಸೆ ಗ್ರಾಮ ಪಂಚಾಯತ ಸದಸ್ಯೆ ನಾಗವೇಣಿ ಆಗೇರ, ನಿವೃತ್ತ ನೌಕರರಾದ ಶಿವಾನಂದ ಆಗೇರ, ಶಾಲೆ ಮುಖ್ಯೋಪಾಧ್ಯಾಯರಾದ ರೇಣುಕಾ ರಮಾನಂದ, ಶಿಕ್ಷಕಿ ಸವಿತಾ ಗುನಗಾ, ಅಂಗನವಾಡಿ ಶಿಕ್ಷಕಿ ಪವಿತ್ರಾ ಆಗೇರ ಮುಂತಾದವರು ಇದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.