ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು

ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
ಅಂಕೋಲಾ : ಆಟವಾಡುತ್ತಿದ್ದಾಗ ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು ಕಂಡಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಡೊಂಗ್ರಿ ಗ್ರಾಪಂ ವ್ಯಾಪ್ತಿಯ ಹಳವಳ್ಳಿಯಲ್ಲಿ ನಡೆದಿದೆ.
ಸಾದ್ವಿ ಶ್ರೀಕಾಂತ್ ಹೆಬ್ಬಾರ್ (2), ಮೃತಪಟ್ಟ ಬಾಲಕಿಯಾಗಿದ್ದಾಳೆ. ಬಾಲಕಿಯು ತಂದೆ ಜೊತೆ ದನದ ಕೊಟ್ಟಿಗೆ ಬಳಿ ತೆರಳಿದ್ದಳು. ಕೊಟ್ಟಿಗೆ ಕೆಲಸದಲ್ಲಿ ತಂದೆ ಶ್ರೀಕಾಂತ ಹೆಬ್ಬಾರ್ ಮಗ್ನರಾಗಿದ್ದ ವೇಳೆ ಮಗು ಆಟವಾಡುತ್ತಲೆ ಗೊಬ್ಬರ ಗುಂಡಿಯ ಬಳಿ ಸಾಗಿ, ಅದರಲ್ಲಿ ಬಿದ್ದಿದ್ದಳು.
ಕೆಲವು ಸಮಯದ ಬಳಿಕ ಮಗು ಸದ್ದು ಕೇಳದಿದ್ದಾಗ ಮಗುವಿಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಅಷ್ಟರಲ್ಲೆ ಮಗು ಗೊಬ್ಬರದ ಗುಂಡಿಯಲ್ಲಿ ಬಿದ್ದಿದ್ದಳು. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲೇ ಮಗಳು ಮೃತಪಟ್ಟಿದ್ದಾಳೆ ಎಂದು ಪೊಲೀಸ್ ದೂರಿನಲ್ಲಿ ತಂದೆ ಶ್ರೀಕಾಂತ ಹೆಬ್ಬಾರ ಉಲ್ಲೇಖಿಸಿದ್ದಾರೆ.
ಮೃತ ಸಾದ್ವಿ ಹಳವಳ್ಳಿ ಗ್ರಾಮದ ಮೂಲೆಮನೆಯ ಶ್ರೀಕಾಂತ್ ಹೆಬ್ಬಾರ್ ಮತ್ತು ರೂಪಾ ದಂಪತಿಯ ದ್ವಿತೀಯ ಪುತ್ರಿಯಾಗಿದ್ದಳು. ಮುದ್ದು ಮುದ್ದಾದ ಪುಟ್ಟ ಮಗುವಿನ ಸಾವಿನ ಸುದ್ದಿಯಿಂದ ಈಡಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಈ ಕುರಿತು ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
