ರಾಘು ಕಾಕರಮಠ.
ಅಂಕೋಲಾ : ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ಜೋರಾಗಿದೆ. ಅರಣ್ಯ ಇಲಾಖೆಯ ಅಂಕೆ-ಅ0ಶದ ಪ್ರಕಾರ ಬರೋಬ್ಬರಿ 51 ಜಾನುವಾರುಗಳನ್ನು ಚಿರತೆ ಭೇಟೆಯಾಡಿ ತಿಂದು ತೇಗಿದ್ದು ನಾಗರಿಕರಲ್ಲಿ ಆತಂಕದ ಛಾಯೆ ಮನೆ ಮಾಡಿದೆ.
ಚಾಲಾಕಿ ಚಿರತೆಗಳು :
ಅಂಕೋಲಾದ ತಳಗದ್ದೆ, ಬೆಳಸೆ, ಸಕಲಬೇಣ, ಶಿರೂರು, ಶೆಟಗೇರಿ ಬಾಗಗಳಲ್ಲಿ ಚಿರತೆಗಳ ಆರ್ಭಟ ಜೋರಾಗಿದೆ. ಜಾನುವಾರಗಳನ್ನು ಬೇಟೆಯಾಡಿ ತಿಂದು ಮುಗಿಸುವ ಈ ಚಿರತೆಗಳು ಅರಣ್ಯ ಇಲಾಖೆಗೂ ಸವಾಲಾಗಿ ಪರಿಗಣಿಸಿದೆ. ಚಿರತೆಗಳನ್ನು ಹಿಡಿಯಲು ಬೋನ್ (ಪಂಜರ)ಗಳನ್ನು ಅಳವಡಿಸಿದರೆ ಅದಕ್ಕೂ ಬಿಳದೆ, ಚಾಲಾಕಿತನದಿಂದ ತಪ್ಪಿಸಿಕೊಳ್ಳುತ್ತಿದೆ.
ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ;
ಚಿರತೆಗಳ ಉಪಟಳದಿಂದ ಜನತೆಗೆ ಹೈರಾಣಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ವಿಶೇಷ ಕ್ರಮವಹಿಸಿ ಚಿರತೆಗಳ ಹಾವಳಿಯನ್ನು ನಿಯಂತ್ರಿಸಲು ಯೋಜನೆಯನ್ನು ರೂಪಿಸಿದೆ. ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಕೃಷ್ಣಯ್ಯ ಅಣ್ಣಯ್ಯ ಗೌಡ ಅವರು ಈ ಬಗ್ಗೆ ವಿಶೇಷ ಗಮನ ಹರಿಸಿ ತಾಲೂಕಿನಲ್ಲಿ ವನ್ಯ ಜೀವಿಗಳ ಬಗ್ಗೆ ಜಾಗೃತಿ ಅಭಿಯಾನ, ಗ್ರಾಮ ಅರಣ್ಯ ಸಮಿತಿಯಿಂದ ವಿಶೇಷ ಸಭೆ, ಜಾನುವಾರುಗಳನ್ನು ಕಾಡಿಗೆ ಬಿಡದಂತೆ ಮನವೊಲಿಕೆ ಹಾಗೂ ಅರಣ್ಯಕ್ಕೆ ಸಾಗುವ ರಸ್ತೆಗಳಲ್ಲಿ ಬೇಲಿ ನಿರ್ಮಾಣ ಸೇರಿದಂತೆ ಹತ್ತಾರು ಕ್ರಮಗಳನ್ನು ಕೈಗೊಳ್ಳುವದರ ಮೂಲಕ ಚಿರತೆಗಳ ಚಿಂತೆಯಿ0ದ ನಾಗರಿಕರು ದೂರವಾಗಲು ಶ್ರಮವಹಿಸಿದ್ದಾರೆ.

ಕಾಡಿನ ಅವಲಂಬನೆ :
ಇಲ್ಲಿನ ಕೆಲವು ಹಳ್ಳಿ ಸಮುದಾಯಗಳು ತಮ್ಮ ಜೀವನ ನಿರ್ವಹಣೆಗೆ ಕಾಡುಗಳನ್ನು ಪರ್ಯಾಯವಾಗಿ ಅವಲಂಬಿಸಿದ್ದಾರೆ. ಹೀಗಾಗಿ ಇವರು ಅರಣ್ಯಕ್ಕೆ ಹತ್ತಿರದ ಗ್ರಾಮಗಳಲ್ಲಿ ವಾಸ ಮಾಡುತ್ತಾರೆ. ಹಾಗೆ ತಮ್ಮ ಜಾನುವಾರುಗಳನ್ನು ಹತ್ತಿರದ ಅರಣ್ಯ ಪ್ರದೇಶದಲ್ಲಿ ಮೇಯಲು ಬಿಡಲಾಗುತ್ತದೆ. ಕಾಡುಪ್ರಾಣಿಗಳು ಕೆಲವೊಮ್ಮೆ ತಮ್ಮ ಆಹಾರ ಶೋಧಕ್ಕಾಗಿಯೋ ಅಥವಾ ದಾರಿ ತಪ್ಪಿಯೋ ಗ್ರಾಮಗಳಿಗೆ ಲಗ್ಗೆ ಇಡುತ್ತವೆ. ಆಗ ಗ್ರಾಮಗಳಲ್ಲಿ ರೈತರು ಸಾಕಿದ ಹಸು, ನಾಯಿ, ಬೆಕ್ಕು, ಕೋಳಿ ಮುಂತಾದ ಸಾಕು ಪ್ರಾಣಿಗಳನ್ನು ಭೇಟೆಯಾಡಿ ತಿನ್ನುತ್ತಿರುವುದರಿಂದ ರೈತರು ತಮ್ಮ ಜೀವನೋಪಾಯಕ್ಕಾಗಿ ಸಾಕಿದ ಪ್ರಾಣಿಗಳ ಸಾವಿನಿಂದ ತೀವ್ರ ನಷ್ಟಕ್ಕೆ ಒಳಗಾಗುತ್ತಿದ್ದಾರೆ.
ಚಿರತೆಗಳು 51 ಜಾನುವಾರುಗಳನ್ನು, 800 ಕ್ಕೂ ಹೆಚ್ಚು ನಾಯಿ, 7 ಕುರಿ, 1700 ಕ್ಕೂ ಹೆಚ್ಚು ಕೋಳಿಗಳನ್ನು ತಿಂದು ನಾಲಿಗೆ ಚಪ್ಪರಿಸಿದೆ. ಜಾನುವಾರುಗಳಿಗೆ ಮಾತ್ರ ಪರಿಹಾರ ದೊರೆಯುತ್ತ ಇರುವದರಿಂದ ಸರಕಾರಿ ದಾಖಲೆಯಲ್ಲಿ ಜಾನುವಾರ ಸಾವು ಮಾತ್ರ ದಾಖಲಾಗಿರುವದು ಗಮನಾರ್ಹವಾಗಿದೆ.
ಚಿರತೆ ಹಾವಳಿ ನಿಯಂತ್ರಿಸಲು ವಿಶೇಷ ಕ್ರಮ ಕೈಗೊಳ್ಳಲಾಗಿದೆ. ನಾಗರಿಕರು ಸಹ ಈ ಬಗ್ಗೆ ಜಾಗೃತರಾಗಿ ಸಹಕಾರ ನೀಡಬೇಕಿದೆ.ಚಿರತೆಗಳ ಆಹಾರವಾಗಿ ಬಲಿಯಾದ 51 ಜಾನುವಾರ ಸಮಗ್ರ ವರದಿಯನ್ನು ಸಿದ್ದಪಡಿಸಿ ಸರಕಾರಕ್ಕೆ ನೀಡಲಾಗಿದೆ.
ಗಣಪತಿ ನಾಯಕ. ವಲಯ ಅರಣ್ಯಾಧಿಕಾರಿಗಳು ಅಂಕೋಲಾ.
ಜಾನುವಾರು ಇಲ್ಲಿನ ಜನತೆಯ ಉಪಜೀವನಕ್ಕೆ ಆಧಾರವಾಗಿದೆ. ಇದನ್ನು ಚಿರತೆಗಳು ಭೇಟಿ ತಿನ್ನುವದರಿಂದ ರೈತರು ತೀವ್ರ ಆತಂತಕ್ಕೆ ಒಳಗಾಗಿದ್ದಾರೆ. ಮೃತಪಟ್ಟ ಜಾನವರುಗಳಿಗೆ ಸೂಕ್ತ ಪರಿಹಾರ ಸರಕಾರ ನೀಡಬೇಕು. ಹಾಗೆ ಚಿರತೆ ಹಾವಳಿಯ ನಿಗ್ರಹಕ್ಕೆ ವಿಶೇಷ ಕ್ರಮವನ್ನು ಅರಣ್ಯ ಕೈಗೊಳ್ಳಬೇಕಿದೆ.
ವೆಂಕಟೇಷ ಕೆ. ನಾಯ್ಕ. ಕಣಗಿಲ.
ರೈತ
