ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
ಅಂಕೋಲಾ : ಕಾನೂನುಬದ್ಧವಾಗಿ ಮಗು ದತ್ತು ಪಡೆಯಲು ಬಯಸಿದ ದಂಪತಿಯನ್ನು ದೊಡ್ಡ ಮಟ್ಟದಲ್ಲಿ ವಂಚಿಸಿರುವ ಘಟನೆ ಅಂಕೋಲಾದಲ್ಲಿ ಬೆಳಕಿಗೆ ಬಂದಿದೆ.
ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕುಮಟಾದವರಾದ ಮಾಲಿನಿ ಗಣಪತಿ ಅಂಬಿಗೆ ಅಲಿಯಾಸ್ ಮಾಲಿನಿ ಶ್ರೀಧರ ಕುಮಟಾಕರ, ಶ್ರೀಧರ ಕುಮಟಾಕರ, ಹೊನ್ನಾವರದರಾದ ಲೋಹಿತ ಈಶ್ವರ ತಾಂಡೇಲ, ರಾಜೇಂದ್ರ ಮೇಸ್ತಾ ಹಾಗೂ ರಾಘವೇಂದ್ರ ಉದಯ ನಾಯ್ಕ ಕುಮಟಾ ಇವರ ಮೇಲೆ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ ;
ಮಕ್ಕಳಿಲ್ಲದ ಕಾರಣ ತೆಂಕಣಕೇರಿಯ ದಂಪತಿಗಳು ಕಾನೂನುಬದ್ಧವಾಗಿ ಮಗು ದತ್ತು ಪಡೆಯಲು ಪ್ರಯತ್ನಿಸುತ್ತಿದ್ದರು. ಈ ವಿಷಯವನ್ನು ತಮ್ಮ ಸಂಬAಧಿ ಹೊನ್ನಾವರದ ಲೋಹಿತ ಈಶ್ವರ ತಾಂಡೇಲ ಅವರ ಬಳಿ ಹೇಳಿಕೊಂಡಾಗ ತಾನು ನಿಮಗೆ ಕಾನುನು ಬದ್ಧವಾಗಿ ಗಂಡು ಮಗು ದೊರಕಿಸುವಲ್ಲಿ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿ ಮಾಲಿನಿ ಶ್ರೀಧರ ಕುಮಟಾಕರ ಅವರನ್ನು ಭೇಟಿ ಮಾಡಿಸಿದ್ದನು.
ನಂತರ 12-09-24 ರಂದು ಗಂಡು ಮಗು ನೀಡುವ ಸಲುವಾಗಿ ತುರ್ತು ಹಣ ಬೇಕಾಗಿದೆ ಎಂದು ತಿಳಿಸಿ ಅಂಕೋಲಾದ ಎಸ್.ಬಿ.ಐ ಬ್ಯಾಂಕಿನ ಎದುರು ಕಾರಿನಲ್ಲಿ ಬಂದ ಮಾಲಿನಿ ಗಣಪತಿ ಅಂಬಿಗೆ ಅಲಿಯಾಸ್ ಮಾಲಿನಿ ಶ್ರೀಧರ ಕುಮಟಾಕರ, ಶ್ರೀಧರ ಕುಮಟಾಕರ ಇವರು ತಮ್ಮ ಕಾರಿನ ಚಾಲಕ ರಾಘವೇಂದ್ರ ಉದಯ ನಾಯ್ಕ ಕುಮಟಾ ಇವನ ಬಳಿ 3 ಲಕ್ಷದ ಚೆಕ್ ಹಾಗೂ 1 ಲಕ್ಷ ನಗದು ಬ್ಯಾಂಕ ಖಾತೆಗೆ ಜಮಾ ಮಾಡುವಂತೆ ತಿಳಿಸಿದ್ದರು. ಅದರನ್ವು 4 ಲಕ್ಷ ಹಣವನ್ನು ಅವರಿಗೆ ದಂಪತಿಗಳು ಸಂದಾಯ ಮಾಡಿದ್ದರು.
ನಂತರ ಮತ್ತೆ ಮಗುವನ್ನು ಕಾನೂನು ಪ್ರಕಾರ ದತ್ತು ಪಡೆಯಲು ವಕೀಲರ ಶುಲ್ಕ ಹಾಗೂ ದತ್ತು ಶುಲ್ಕ ಮತ್ತು ಕಾರ ಬಾಡಿಗೆಗಾಗಿ 50 ಸಾವಿರ ಭೇಡಿಕೆ ಇಟ್ಟಾಗ 29-09-2024 ರಂದು ಮತ್ತೆ 50 ಸಾವಿರ ಹಣವನ್ನು ದಂಪತಿಗಳು ವರ್ಗಾಯಿಸಿದ್ದರು. ನಂತರ ಮತ್ತೆ ಮಗು ದತ್ತು ಪಡೆಯಲು ಬೇರೆ ಕಾನುನುಗಳಿವೆ ಅದಕ್ಕೆ 2 ಲಕ್ಷ ರೂ ನೀಡಬೇಕು ಎಂದಾಗ ಆಗ ದಂಪತಿಗಳು ನಿರಾಕರಿಸಿದಾಗ ಆರೋಪಿತರು ಅಸಭ್ಯವಾಗಿ ಮಾತನಾಡಿ ಹೀಯಾಳಿಸಿದ್ದಾರೆ.
ನಿಮ್ಮ ಹಣ ಹಿಂತಿರುಗಿಸಲು 6 ರಿಂದ 9 ತಿಂಗಳು ಬೇಕು, ಮತ್ತೇ ಕರೆ ಮಾಡಿದರೆ ಮನೆಗೆ ಬಂದು ಕಟ್ಟಿ ಹಾಕಿ ಹೊಡೆಯುತ್ತೇವೆ ಎಂದು ಧಮಕಿ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿತರ ವಿರುದ್ಧ ಮೋಸ, ವಂಚನೆ ಮತ್ತು ಬೆದರಿಕೆ ಆರೋಪ ಮಾಡಲಾಗಿದೆ.
ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ರಿಮಿನಲ್ ಕೇಸ್ ದಾಖಲಿಸಿ ಪೊಲೀಸ್ ತನಿಖೆ ಆರಂಭಿಸಿದ್ದಾರೆ.
——————–